For the best experience, open
https://m.justkannada.in
on your mobile browser.

ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ.

06:25 PM Feb 06, 2024 IST | prashanth
ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ

ಬೆಂಗಳೂರು,ಫೆಬ್ರವರಿ,6,2024(www.justkannada.in): ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದ ರೈತರ ತಂಡ ಫ್ರೀಡಂ ಪಾರ್ಕ್  ಉದ್ಯಾನವನದಲ್ಲಿ ಬೆಂಗಳೂರು ಚಲೋ ಮೂಲಕ ಬೃಹತ್ ಪ್ರತಿಭಟನೆ ನಡೆಸಿತು.  ಸಾವಿರಾರು ಸಂಖ್ಯೆಯಲ್ಲಿ ರೈತ ಮುಖಂಡರು ಪಾಲ್ಗೊಂಡಿದ್ದರು.

ಸರ್ಕಾರದ ವಿರುದ್ದ  ಧಿಕ್ಕಾರ ಘೋಷಣೆ ಕೂಗುತ್ತಾ ಪ್ರತಿಭಟನೆ  ನಡೆಸಿದ್ದು, ಸಾವಿರಾರು ಸಂಖ್ಯೆಯ ರೈತರು ರೈತ ಮಹಿಳೆಯರು ಗ್ರೀನ್ ಬರ್ಡ್ಸ್ ಠೇವಣಿ ವಂಚಿತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ  ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್, ಹಳ್ಳಿಗಳಲ್ಲಿ ರೈತರು ಕೃಷಿ ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆತ್ಮಹತ್ಯೆಗಳ ಸರಣಿ ಹೆಚ್ಚುತ್ತಿದೆ. ಬರಗಾಲ ಕಾಡುತ್ತಿದೆ. ರೈತರ ಮಕ್ಕಳ ಮದುವೆಯಾಗಲು ಹೆಣ್ಣುಮಕ್ಕಳು ಒಪ್ಪುತ್ತಿಲ್ಲ. ಕೃಷಿ ದುರ್ಬಲವಾಗುತ್ತಿದೆ. ಎಲ್ಲವನ್ನೂ ಪರಿಗಣಿಸಿ ಸರ್ಕಾರ ರೈತರ ಸಾಲ ಮನ್ನಾ ಮಾಡಲೇಬೇಕು. ಕಾಂಗ್ರೆಸ್ ಸರ್ಕಾರವೇ ತೆಲಂಗಾಣದಲ್ಲಿ ಸಾಲ ಮನ್ನಾ ಮಾಡಿಲ್ಲವೇ..? ಕರ್ನಾಟಕದಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ , ರಾಜ್ಯ, ಸರ್ಕಾರಗಳು ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನದ ವಿಚಾರದಲ್ಲಿ ಕೆಸರೆರಾಚಾಟ ಆಡುತ್ತಾ, ರೈತರ ಬಗ್ಗೆ ಮೂಸಳೆ ಕಣ್ಣಿರು ಸುರಿಸುತ್ತಿವೆ. ಕಳೆದ ಹತ್ತು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ, ಖರ್ಚು ಮಾಡಿರುವ ಅನುದಾನ ಎಷ್ಟು...? ಎಂಬುದರ ಬಗ್ಗೆ ಎರಡು ಸರ್ಕಾರಗಳು ಶ್ವೇತಪತ್ರ ಬಿಡುಗಡೆ ಮಾಡಲಿ ಆಗ ರೈತರಿಗೆ ನಿಜ ಬಣ್ಣ ಬಯಲಾಗುತ್ತದೆ. ರೈತರಿಗೆ ಕನಿಕರ ಬೇಕಾಗಿಲ್ಲ ನೈಜ ಪರಿಹಾರ ಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಾಂಖಿಕ ಸಚಿವ ಡಿ . ಸುಧಾಕರ್ ಆಗಮಿಸಿ ಪ್ರತಿಭಟನಾಕಾರರ ಒತ್ತಾಯ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು,  ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ. ನಾಳೆ ದೆಹಲಿಯಲ್ಲಿ ಈ ಒತ್ತಾಯಗಳ ವಿಚಾರವನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಸಮಯಾವಕಾಶ ಸಿಕ್ಕರೆ ಮುಖಂಡರನ್ನು ಆಹ್ವಾನಿಸಿ ಚರ್ಚಿಸಲಾಗುವುದು ಎಂದರು.

ಗ್ರೀನ್ ಬರ್ಡ್ಸ್ ಠೇವಣಿದಾರರ ಹಣ ಕೊಡಿಸಲು ಎರಡು ದಿನದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಸೂಚನೆ ನೀಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ ಹತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್,  ಜೀ. ವಿ ಲಕ್ಷ್ಮೀದೇವಿ, ಕಿರಗಸೂರ ಶಂಕರ, ಗುರುಸಿದ್ದಪ್ಪ, ದೇವ ಕುಮಾರ್, ಪರಶುರಾಮ್, ರವಿಕುಮಾರ್, ಧರ್ಮರಾಜ್ ಸಾವು, ರಮೇಶ್ ಉಗಾರ್, ಧರ್ಮರಾಜ್, ರೇವಣ್ಣ, ಮುಂತಾದ ಸಾವಿರಾರು ಜನರು ಭಾಗವಹಿಸಿದ್ದರು.

Key words: Bangalore- protest farmer-Kuruburu Shanthakumar

Tags :

.