HomeBreaking NewsLatest NewsPoliticsSportsCrimeCinema

ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಸಾಧ್ಯ-ಸಿಎಂ ಸಿದ್ದರಾಮಯ್ಯ.

05:10 PM Jan 13, 2024 IST | prashanth

ಕೂಡಲಸಂಗಮ, ಜನವರಿ, 12,2024(www.justkannada.in):  ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಸಾಧ್ಯ. ಶರಣ ಎಂದರೆ ಜಾತಿ-ವರ್ಗ ಇಲ್ಲದ್ದು. ಶರಣ ಮೇಳ ಎಂದರೆ ಜಾತಿಯಿಂದ ಮುಕ್ತರಾದ ಮನುಷ್ಯರ ಮೇಳ ಎಂದು ಸಿ.ಎಂ ಸಿದ್ದರಾಮಯ್ಯ ಅವರು ನುಡಿದರು.

ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲ ಸಂಗಮದಲ್ಲಿ ಆಯೋಜಿಸಿದ್ದ 37 ನೇ ಶರಣ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ನಮ್ಮ ಚಲನೆ ರಹಿತ ಜಾತಿ ವ್ಯವಸ್ಥೆಯ ಸಾಮಾಜಿಕ ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ರೂಪಿಸಿದರು. ಇದನ್ನು ಮಾಡಿದ್ದು ದೇವರಲ್ಲ ಎಂದು ನುಡಿದರು.

ಬಹು ಸಂಖ್ಯಾತರನ್ನು ಶಿಕ್ಷಣದಿಂದ ದೂರ ಇಡಲು ಅಸಮಾನತೆಯಿಂದ ಕೂಡಿದ ಚಾತುವರ್ಣ ವ್ಯವಸ್ಥೆಯನ್ನು ಮಾಡಿದರು. ಬಸವಾದಿ ಶರಣರ ವಚನ ಚಳವಳಿ ತಾರತಮ್ಯದಿಂದ ಕೂಡಿದ ಕರ್ಮ ಸಿದ್ಧಾಂತವನ್ನು, ಮೌಢ್ಯವನ್ನು ತೊಡೆದು ಹಾಕಿತು. ಹಣೆ ಬರಹ ಮತ್ತು ಕರ್ಮ ಸಿದ್ಧಾಂತವನ್ನು, ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದನ್ನು ಬಸವಣ್ಣನವರು ಸಂಪೂರ್ಣ ತಿರಸ್ಕರಿಸಿದರು.

ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಾದಿ ಶರಣರು ಪ್ರತಿಪಾದಿಸಿದರು. ಧರ್ಮ ತಾರತಮ್ಯ ಮಾಡಬೇಡಿ, ಮನುಷ್ಯ ಮನುಷ್ಯನನ್ನು ದ್ವೇಷಿಸುವುದನ್ನು ಬಸವಾದಿ ಶರಣರು ವಿರೋಧಿಸಿದ್ದರು. ಈ ಕಾರಣಕ್ಕೇ ಇವ ನಮ್ಮವ, ಇವ ನಮ್ಮವ ಎನ್ನುವ ಉದಾತ್ತವಾದ ಮೌಲ್ಯವನ್ನು800 ವರ್ಷಗಳ ಹಿಂದೆಯೇ ಹೇಳಿದರು. ಹೀಗಾಗಿ ಜಾತಿ ವ್ಯವಸ್ಥೆಯನ್ನು ಶರಣರೇ ಹೋಗಲಾಡಿಸಬೇಕು ಎಂದರು.

ಜಾತಿ ಕಾರಣಕ್ಕೆ ಹಿಂದುಳಿದಿರುವ ಸಮುದಾಯಗಳಿಗೆ ಆರ್ಥಿಕ ಶಕ್ತಿ ನೀಡಬೇಕು. ಜಾತಿ, ವರ್ಗ, ಅಂತಸ್ತನ್ನು ಸೋಕಿಸಿಕೊಳ್ಳದೆ ಇರುವವರು ಮಾತ್ರ ನಿಜ ಶರಣರು ಎಂದು ಬಣ್ಣಿಸಿದರು.

ಪಟ್ಟಭದ್ರ ಹಿತಾಸಕ್ತರು ಇರುವುದು ಬಹಳ ಕಡಿಮೆ ಜನ. ಆದರೆ ಇವರು ಸ್ಟ್ರಾಂಗ್ ಇದ್ದಾರೆ. ಆದರೆ, ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದವರು ಬಹುಸಂಖ್ಯಾತರು. ಇವರು ಒಗ್ಗಟ್ಟಾಗಬೇಕು ಎಂದರು.

ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀಮನ್ನಿರಂಜನ ಮಹಾ ಜಗದ್ಗುರು ಡಾ. ಮಾತೆಗಂಗಾದೇವಿಯವರು, ಪೀಢದ ಉಪಾದ್ಯಕ್ಷರಾದ ಮಹದೇಶ್ವರ ಸ್ವಾಮೀಜಿ, ಕುಂಬಳಗೋಡಿನ ವಿಶ್ವಕಲ್ಯಾಣ ಮಿಷನ್ ನ ಬಸವಯೋಗಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುನಗುಂದ ಶಾಸಕರಾದ ಶರಣ ವಿಜಯಾನಂದ ಕಾಶಪ್ಪನವರ್ ವಹಿಸಿದ್ದರು.

ಸಚಿವರಾದ ಭೈರತಿ ಸುರೇಶ್, ತಿಮ್ಮಾಪುರ ಅವರ ಜತೆಗೆ ಶಾಸಕರಾದ ಎಂ.ನರೇಂದ್ರ ಸ್ವಾಮಿ, ಎಚ್.ವೈ.ಮೇಠಿ, ರಾಘವೇಂದ್ರ ಹಿಟ್ನಾಳ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Key words:Basavadi Sharana - desire -build - casteless society - possible- CM Siddaramaiah.

Tags :
Basavadi Sharana - desire -build - casteless society - possible- CM Siddaramaiah.
Next Article