For the best experience, open
https://m.justkannada.in
on your mobile browser.

ಕೇಂದ್ರ ಸಂಪುಟದಲ್ಲಿರಬೇಕಾಗಿದ್ದ ಗೆಹ್ಲೋಟ್ ಅವರನ್ನ ‘ಪಂಜರದ ಗಿಣಿ’ಯನ್ನಾಗಿ ಮಾಡಿದ್ದೀರಿ?  ಬಿಜೆಪಿಗೆ ಕುಟುಕಿದ ಸಿಎಂ ಸಿದ್ದರಾಮಯ್ಯ

05:04 PM Aug 22, 2024 IST | prashanth
ಕೇಂದ್ರ ಸಂಪುಟದಲ್ಲಿರಬೇಕಾಗಿದ್ದ ಗೆಹ್ಲೋಟ್ ಅವರನ್ನ ‘ಪಂಜರದ ಗಿಣಿ’ಯನ್ನಾಗಿ ಮಾಡಿದ್ದೀರಿ   ಬಿಜೆಪಿಗೆ ಕುಟುಕಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್, 22,2024 (www.justkannada.in):  ರಾಜ್ಯಪಾಲರ ಬಗ್ಗೆ ಕಾಂಗ್ರೆಸ್ ನಾಯಕರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಹಲವು ಪ್ರಶ್ನೆಗಳನ್ನಾಗಿ ಕುಟುಕಿದ್ದಾರೆ.

ಈ ಸಂಬಂಧ ಫೇಸ್ ಬುಕ್ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,  ರಾಜ್ಯದ ಘನತೆವೆತ್ತ ರಾಜ್ಯಪಾಲರಾಗಿರುವ ಥಾವರ್ ಚಂದ್ ಗೆಹ್ಲೋತ್ ಅವರ ತಪ್ಪು ನಡೆಯ ಬಗೆಗಿನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ರಾಜ್ಯದ ಬಿಜೆಪಿ ನಾಯಕರು "ದಲಿತ ಗುರಾಣಿ" ಬಳಸುತ್ತಿರುವುದು ಸಮಸ್ತ ಸ್ವಾಭಿಮಾನಿ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ‘ಹಿಂದುಗಳಲ್ಲಿ ಜಾತಿಯೇ ಇಲ್ಲ, ಧರ್ಮವೇ ಎಲ್ಲ ಎಂದು ಉಪದೇಶ ಮಾಡುತ್ತಿರುವ ಬಿಜೆಪಿ ನಾಯಕರ ಬುಡಕ್ಕೆ ನೀರು ಬಂದಾಗ ಜಾತಿ ನೆನಪಾಗುತ್ತದೆ.

ರಾಜ್ಯಪಾಲರಿಗೆ ಅವಮಾನವಾಗಿದೆ ಎಂದು ಪ್ರತಿಭಟಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ನನ್ನ ಕೆಲವು ಸರಳ ಪ್ರಶ್ನೆಗಳಿವೆ.

ಮೊದಲನೆಯದಾಗಿ, ದಲಿತ ಸಮುದಾಯಕ್ಕೆ ಸೇರಿರುವ ಥಾವರಚಂದ್ ಗೆಹ್ಲೋತ್ ಅವರ ಬಗ್ಗೆ ನಿಮ್ಮಲ್ಲಿ ಅಷ್ಟೊಂದು ಗೌರವ ಮತ್ತು ಅಭಿಮಾನವಿದ್ದರೆ ಕೇಂದ್ರ ಸಚಿವ ಸಂಪುಟದಲ್ಲಿರಬೇಕಾಗಿದ್ದ ಅವರನ್ನು ಇಲ್ಲಿ ತಂದು ‘‘ಪಂಜರದ ಗಿಣಿ’ಯನ್ನಾಗಿ ಯಾಕೆ ಮಾಡಿದ್ದೀರಿ? ‘‘ಮಾರ್ಗದರ್ಶಕ ಮಂಡಳಿ ಎಂಬ ವನವಾಸಾಶ್ರಮ ಸೇರುವಷ್ಟು ವಯಸ್ಸಾಗದೆ ಇದ್ದರೂ ಅವರ ಸಕ್ರಿಯ ರಾಜಕೀಯ ಜೀವನವನ್ನು ಯಾಕೆ ಮೊಟಕುಗೊಳಿಸಿದಿರಿ?  ಎಂದು ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಕೇಂದ್ರ ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿ, ತಮ್ಮ ರಾಜಕೀಯ ವಿರೋಧಿಗಳ ವಿರುದ್ದದ ದ್ವೇಷದ ರಾಜಕಾರಣಕ್ಕೆ ದಲಿತ ಸಮುದಾಯದ ನಾಯಕನನ್ನು  ದುರ್ಬಳಕೆ ಮಾಡಿಕೊಳ್ಳುವುದು ಆ ಸಮುದಾಯಕ್ಕೆ ಮಾಡುವ ಅನ್ಯಾಯ-ಅವಮಾನ ಅಲ್ಲವೇ? ಬಿಜೆಪಿ ನಾಯಕರೇ, ದಲಿತ ನಾಯಕರೊಬ್ಬರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ?!  ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ದಲಿತರನ್ನು ಬಳಸಿ ಬಿಸಾಡುವ ಬಿಜೆಪಿ ಮತ್ತು ಸಂಘ ಪರಿವಾರದ ಪಿತೂರಿ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಷ್ಟು ದಲಿತ ಸಮುದಾಯ ಜಾಗೃತವಾಗಿದೆ. ಈಗ ನೀವು ದಲಿತರ ಹೆಸರಲ್ಲಿ ಸುರಿಸುತ್ತಿರುವ ಮೊಸಳೆ ಕಣ್ಣೀರಿನ ಹಿಂದಿನ ಪ್ರಾಮಾಣಿಕತೆ ತಿಳಿಯದಷ್ಟು ದಡ್ಡರಲ್ಲ. ಕನಿಷ್ಠ ಅಟಲ್ ಬಿಹಾರಿ ವಾಜಪೇಯಿ ಅವರು ದಲಿತ ಸಮುದಾಯಕ್ಕೆ ಸೇರಿರುವ ಬಂಗಾರು ಲಕ್ಷ್ಮಣ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆದರೆ ಬಿಜೆಪಿಯೊಳಗಿನ ‘‘ಸಂಘಿ ಮನಸ್ಸು’’ ಅದನ್ನು ಸಹಿಸಿಕೊಳ್ಳದೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿತು, ಕೊನೆಗೆ ಅದೇ ಕೊರಗಿನಲ್ಲಿ ಅವರು ಸಾವಿಗೀಡಾದರು

ದಲಿತ ಸಮುದಾಯದಕ್ಕೆ ಸೇರಿರುವ ನಮ್ಮ ಪಕ್ಷದ ಈಗಿನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಹಿರಿಯ ನಾಯಕರು ಎಷ್ಟು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಿ ಕಲಿಯಿರಿ.

ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ, ಮೀಸಲಾತಿಯನ್ನು ವಿರೋಧಿಸುತ್ತಿರುವ ಮತ್ತು ಜಾತಿ ತಾರತಮ್ಯವನ್ನು ಅಂತರಂಗದಲ್ಲಿ ಒಪ್ಪಿಕೊಂಡು ಬಹಿರಂಗದಲ್ಲಿ ಜಾತ್ಯತೀತತೆಯ ಸೋಗುಹಾಕಿರುವ ನಿಮಗೆ ದಲಿತರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ನಿಮಗೆ ದಲಿತ ಸಮುದಾಯದ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ಥಾವರಚಂದ್ ಗೆಹ್ಲೋತ್ ಅವರ ಮೇಲೆ ಕೆಟ್ಟ ಕೆಲಸ ಮಾಡಲು ರಾಜಕೀಯ ಒತ್ತಡ ಹೇರಲು ಹೋಗದೆ, ಅವರು ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಿ, ಈ ಪ್ರತಿಭಟನೆ, ಪ್ರತಿರೋಧದ ನಾಟಕಗಳನ್ನು ನಿಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Key words: cage, parrot, BJP, Governor, CM, Siddaramaiah

Tags :

.