For the best experience, open
https://m.justkannada.in
on your mobile browser.

ಸುದ್ದಿಗೋಷ್ಠಿ ವೇಳೆಯೇ ಹೃದಯಾಘಾತದಿಂದ ‘ಕೈ’ ಕಾರ್ಯಕರ್ತ ಸಾವು: ಸಿಎಂ ಸಿದ್ದರಾಮಯ್ಯ ಸಂತಾಪ

05:25 PM Aug 19, 2024 IST | prashanth
ಸುದ್ದಿಗೋಷ್ಠಿ ವೇಳೆಯೇ ಹೃದಯಾಘಾತದಿಂದ ‘ಕೈ’ ಕಾರ್ಯಕರ್ತ ಸಾವು  ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು,ಆಗಸ್ಟ್,19,2024 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ  ಅನುಮತಿ ನೀಡಿರುವ  ವಿಚಾರ ಸಂಬಂಧ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವಾಗಲೇ ರಾಜ್ಯ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಸಂಘದ ಮುಖಂಡ ಹಾಗೂ ಕಾಂಗ್ರೆಸ್ ಕಾರ್ಯಕರ್ತ  ರವಿಚಂದ್ರನ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಂದು ಮಧ್ಯಾಹ್ನದ  ಗವರ್ನರ್ ಪ್ರಾಸಿಕ್ಯೂಷನ್ ವಿರೋಧಿಸಿ ಹಿಂದುಳಿದ ವರ್ಗಗಳ ಮುಖಂಡರಿಂದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸುದ್ದಿಗೋಷ್ಠಿ ವೇಳೆ ಹೃದಯಾಘಾತದಿಂದ ಕಾಂಗ್ರೆಸ್ ಕಾರ್ಯಕರ್ತ, ಸಂಘದ ಸದಸ್ಯ ಸಿ.ಕೆ.ರವಿಚಂದ್ರನ್ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾದರೂ ಸಹ ಅವರು ಮೃತಪಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಸಿ.ಕೆ.ರವಿಚಂದ್ರನ್  ನಿಧನಕ್ಕೆ ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಆದೇಶ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ‌ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಂಘದ ಸದಸ್ಯ, ನಮ್ಮ ಪಕ್ಷದ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯಿತು.

ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿನ ಈ ಹೋರಾಟದಲ್ಲಿ ನಮ್ಮ ಜೊತೆಯಾಗಿದ್ದ ರವಿಚಂದ್ರನ್ ಅವರ ನಿಧನ ಅತೀವು ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಸ್ಥರು ಮತ್ತು ಬಂಧುಬಳಗದ ಜೊತೆ ನಾನಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.

Key words: congress worker, dies , heart attack, CM Siddaramaiah, condoles

Tags :

.