For the best experience, open
https://m.justkannada.in
on your mobile browser.

ಮೈಸೂರಿನ ಪರಿಸರ ಬಳಗದಿಂದ ಸೆ.4,5ರಂದು ಪರಿಸರ ಸ್ನೇಹಿ ಗಣೇಶ ತಯಾರಿ ಕಾರ್ಯಾಗಾರ

03:36 PM Sep 02, 2024 IST | prashanth
ಮೈಸೂರಿನ ಪರಿಸರ ಬಳಗದಿಂದ ಸೆ 4 5ರಂದು ಪರಿಸರ ಸ್ನೇಹಿ ಗಣೇಶ ತಯಾರಿ ಕಾರ್ಯಾಗಾರ

ಮೈಸೂರು,ಸೆಪ್ಟಂಬರ್,2,2024 (www.justkannada.in): ನಗರದ ಪರಿಸರ ಬಳಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ - 1, ಮೈಸೂರು ನಗರ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 4 ಮತ್ತು 5ರಂದು ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರವನ್ನು ಶಾಲಾ ಮಕ್ಕಳಿಗೆ ಆಯೋಜಿಸಿದೆ.

ಬುಧವಾರ ಮತ್ತು ಗುರುವಾರ  ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರವನ್ನು ಶಾಲಾ ಮಕ್ಕಳಿಗೆ ಆಯೋಜಿಸಲಾಗಿದೆ. ವಿಜಯನಗರ ಮೊದಲ ಹಂತದಲ್ಲಿರುವ ಯೋಗ ನರಸಿಂಹ ದೇವಸ್ಥಾನದ ಎದುರಿನ ಪಾರ್ಕ್ ಮತ್ತು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಪಕ್ಕದ ಮೈದಾನದಲ್ಲಿ ಕಾರ್ಯಾಗಾರ ನಡೆಯಲಿದೆ. ಸಾರ್ವಜನಿಕರು ಸೀಮಿತ ಸಂಖ್ಯೆಯಲ್ಲಿ  ಭಾಗಿಯಾಗಬಹುದು. ಆದರೆ ಶಿಬಿರಾರ್ಥಿಗಳು (ಶಾಲಾ ಮಕ್ಕಳು) ಮಣ್ಣಿನ ಗಣಪತಿ ಮಾಡುವುದನ್ನು ನೋಡಲು ಸಾರ್ವಜನಿಕರಿಗೆ ಅವಕಾಶವಿದೆ.

ಎರಡೂ ಕಡೆ ಮತ್ತು ಎರಡೂ ದಿನ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ರವರೆಗೆ, ಪ್ರತಿ ದಿನ ಎರಡು ಬ್ಯಾಚಿನಂತೆ ಒಟ್ಟು ಎಂಟು ಬ್ಯಾಚುಗಳಿಗೆ ( ತಂಡಗಳಿಗೆ ) ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರದಲ್ಲಿ ಜೆಎಸ್ಎಸ್ ವಿದ್ಯಾ ಸಂಸ್ಥೆಗಳು, ಶಾಂತಲಾ ವಿದ್ಯಾ ಪೀಠ, ತಿರುಮಲ ಪಬ್ಲಿಕ್ ಸ್ಕೂಲ್, ಭಾರತೀಯ ವಿದ್ಯಾಭವನ ಶಾಲೆ, ಸಂಜೀವಯ್ಯ ಶಾಲೆ ಮುಂತಾದ ಶಾಲೆಗಳಿಂದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಈ ನಿಟ್ಟಿನಲ್ಲಿ,ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪರಿಸರ ಬಳಗದ ವತಿಯಿಂದ ನಡೆದ ಮಣ್ಣಿನ ಗಣಪತಿ ಮಾಡುವ ಕಾರ್ಯಾಗಾರ ತುಂಬಾ ಯಶಸ್ವಿಯಾಗಿತ್ತು. 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 50 ಕ್ಕೂ ಹೆಚ್ಚು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ವರ್ಷವೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಪರಿಸರ ಬಳಗದ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ - 1, ಮೈಸೂರು ನಗರ ಇವರ ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ.

ಶಿಲ್ಪ ಕಲೆಯಲ್ಲಿ ಪರಿಣತಿ ಮತ್ತು ಅನುಭವವಿರುವ ಶಿಲ್ಪಿಗಳಿಂದ ಮಣ್ಣಿನ ಗಣಪತಿ ಮಾಡುವುದನ್ನು ಕಲಿಸಿಕೊಡಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗಿಯಾದವರು ಮಣ್ಣಿನ ಗಣಪತಿ ತಾವೇ ಸ್ವತಃ ತಯಾರಿಸಿ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ. ಮಣ್ಣಿನ ಗಣಪತಿ ಮಾಡಲು ಬೇಕಾಗುವ ಜೇಡಿಮಣ್ಣನ್ನು ಪರಿಸರ ಬಳಗದ ಸ್ವಯಂ ಸೇವಕರು ಒದಗಿಸುತ್ತಾರೆ.

Key words: Environmentally, friendly, Ganesha, preparation, workshop, Mysore

Tags :

.