For the best experience, open
https://m.justkannada.in
on your mobile browser.

ಋಣ ಸಂದಾಯದ ಕಾರಣಕ್ಕೆ ರಾಜ್ಯಪಾಲರ ಕ್ರಮ ಸಮರ್ಥನೆ: ಎಸ್.ಎಲ್ ಭೈರಪ್ಪ ವಿರುದ್ದ ರಮೇಶ್ ಬಾಬು ಕಿಡಿ

06:32 PM Aug 26, 2024 IST | prashanth
ಋಣ ಸಂದಾಯದ ಕಾರಣಕ್ಕೆ ರಾಜ್ಯಪಾಲರ ಕ್ರಮ ಸಮರ್ಥನೆ  ಎಸ್ ಎಲ್ ಭೈರಪ್ಪ ವಿರುದ್ದ ರಮೇಶ್ ಬಾಬು ಕಿಡಿ

ಬೆಂಗಳೂರು,ಆಗಸ್ಟ್,26,2024 (www.justkannada.in): ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಇದೆ . ಸಾಹಿತಿ ಎಸ್. ಎಲ್. ಬೈರಪ್ಪ ಅವರು ತಮ್ಮ ಎಂದಿನ ಚಾಳಿಯಂತೆ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಆಗಿದೆ. ಕೇಂದ್ರ ಸರ್ಕಾರದಿಂದ ಅವರು ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿರುತ್ತದೆ. ಋಣ ಸಂದಾಯದ ಕಾರಣಕ್ಕಾಗಿ ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಕೆಪಿಸಿಸ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಿಡಿಕಾರಿದ್ದಾರೆ.

ಈ ಸಂಬಂಧ ಪ್ರಕಟಣೆ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ರಮೇಶ್ ಬಾಬು,  ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ನಂ. 1224/2023 ಪ್ರಕರಣದಲ್ಲಿ ಇತ್ತೀಚಿಗೆ ಆದೇಶವನ್ನು ನೀಡಿ ರಾಜ್ಯಪಾಲರ ಸಂವಿಧಾನ ಬಾಹಿರ ಕಾರ್ಯಗಳಿಗೆ ತನ್ನ ಅಸಮ್ಮತಿಯನ್ನು ವ್ಯಕ್ತ ಪಡಿಸಿರುತ್ತದೆ. ಇದೇ ಪ್ರಕರಣದಲ್ಲಿ ರಾಜ್ಯಪಾಲರು ವಿಧೇಯಕಗಳನ್ನು ತಡೆಹಿಡಿಯುವುದು ಸರಿಯಾದ ಕ್ರಮ ಅಲ್ಲವೆಂದು ಹೇಳಿರುತ್ತದೆ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ತೆಲಂಗಾಣ, ಛತ್ತಿಸ್ ಗಡ್ ಮತ್ತು ತಮಿಳುನಾಡು ಪ್ರಕರಣಗಳಲ್ಲಿ ರಾಜ್ಯಪಾಲರುಗಳ ನಡೆಯನ್ನು ಸರಿ ಅಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಮಧ್ಯಪ್ರದೇಶದ ಹೈ ಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯಪಾಲರು ಸಂವಿಧಾನದ ನಿಯಮಗಳಿಗೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬೇಕೇ ಹೊರತು ತಮ್ಮ ವೈಯಕ್ತಿಕ ಅನಿಸಿಕೆಗಳಿಗೆ ಅನುಗುಣವಾಗಿ ಆದೇಶಗಳನ್ನು ನೀಡುವುದು ಅಥವಾ ವರ್ತಿಸುವುದು ತಪ್ಪೆಂದು ಬಹಳ ಸ್ಪಷ್ಟವಾಗಿ ಹೇಳಿದೆ. ಸ್ವಯಂ ಘೋಷಿತ ವಿಶ್ವ ವಿಖ್ಯಾತ ಸಾಹಿತಿ ಅರೆ ಸಂವಿಧಾನ ತಜ್ಞ ಎಸ್. ಎಲ್. ಬೈರಪ್ಪ ಅವರಿಗೆ ನ್ಯಾಯಪೀಠಗಳ ತೀರ್ಪುಗಳನ್ನು ಓದಲು ಬಹುಶಃ ಸಮಯದ ಕೊರತೆ ಇರಬಹುದು? ಭೈರಪ್ಪನವರು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ರಾಜ್ಯಪಾಲರ ಹುದ್ದೆಯ ಆಮಿಷವನ್ನೂ ಪಡೆದಿರಬಹುದು ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

ಬೈರಪ್ಪನವರ ಸಾಹಿತ್ಯವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕರು ಟೀಕಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು. ಆರ್. ಅನಂತಮೂರ್ತಿ ಅವರು ಇವರ ಆವರಣ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ನೀಡಿ, ಬೈರಪ್ಪನವರ ಸಾಹಿತ್ಯ ಅಪಾಯಕಾರಿ ಮತ್ತು ಇವರ ಸಾಹಿತ್ಯ ಸಮಾಜಕ್ಕೆ ಮತ್ತು ಸಮುದಾಯಗಳಿಗೆ ಪೂರಕವಲ್ಲ ಎಂದು ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಬೈರಪ್ಪನವರು ತಮ್ಮ ಸಾಹಿತ್ಯ ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬಿಜೆಪಿಮಯಗೊಳಿಸಿದ್ದಾರೆ. ಮೊದಲಿನಿಂದಲೂ ಮೂಲಭೂತವಾದಗಳಿಗೆ ತಮ್ಮ ಸಾಹಿತ್ಯವನ್ನು ಸಮರ್ಪಣೆಗೊಳಿಸಿಕೊಂಡಿರುವ ಬೈರಪ್ಪನವರು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಬಾರದು ಎಂದು ಹೇಳಿರುವುದು ಅವರ ಮನಸ್ಥಿಗೆಗೆ ಅನುಗುಣವಾಗಿ ಇರುತ್ತದೆ. ಬೈರಪ್ಪನವರು ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುವ ಬದಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಳಿದರೆ  ಹೆಚ್ಚು ಚಪ್ಪಾಳೆ ಗಿಟ್ಟಿಸಬಹಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ದೇಶದಲ್ಲಿ ಬೊಮ್ಮಾಯಿ ಪ್ರಕರಣವನ್ನು ಒಳಗೊಂಡಂತೆ ಇತ್ತೀಚಿನ ತಮಿಳುನಾಡು ರಾಜ್ಯಪಾಲರ ಪ್ರಕರಣದವರೆಗೆ ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳನ್ನು ನೀಡಿರುತ್ತದೆ ಮತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಬೇಕು ಮತ್ತು ಸಂವಿಧಾನದ ಅಡಿಯಲ್ಲಿ ದತ್ತವಾದ ಅಧಿಕಾರಗಳನ್ನು ಮಾತ್ರ ಚಲಾಯಿಸಬೇಕು ಎಂದು ಹೇಳಿರುತ್ತದೆ. ರಾಜ್ಯಪಾಲರು ಚುನಾಯಿತ ಸರ್ಕಾರಗಳ ಮೇಲೆ ಸವಾರಿ ಮಾಡಲು ಹೊರಟರೆ ಅದು ಜನಾಭಿಪ್ರಾಯಕ್ಕೆ ಮತ್ತು ಜನತಂತ್ರಕ್ಕೆ ಅಪಚಾರವಾಗುತ್ತದೆ. ರಾಜ್ಯಪಾಲರು ಕೇಂದ್ರ ಸರ್ಕಾರಗಳ ಸೂಚನೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶವಿಲ್ಲವೆಂದು ಸಂವಿಧಾನ ಮತ್ತು ನ್ಯಾಯಾಲಯಗಳು ಬಹಳ ಸ್ಪಷ್ಟವಾಗಿ ತಿಳಿಸಿರುತ್ತವೆ. ಆದರೆ ವಿಶ್ವ ವಿಖ್ಯಾತ ಸಾಹಿತಿಗಳಿಗೆ  ಜಾಣಕುರುಡುತನ ಮತ್ತು ಕಿವುಡುತನ ಒಮ್ಮೊಮ್ಮೆ ಆವರಿಸಿಕೊಳ್ಳುತ್ತದೆ.

ಎಸ್. ಎಲ್.ಬೈರಪ್ಪನವರು ಇಂತಹ ವಿಷಯಕ್ಕೆ ಮೂಗು ತೂರಿಸಿ ಮಾತನಾಡುವ ಬದಲು ಭಾರತೀಯ ಜನತಾ ಪಕ್ಷದಲ್ಲಿ ಯಾವುದಾದರೂ ಹುದ್ದೆಯನ್ನು ಬೇಡಿ ಪಡೆದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡಿದರೆ ಅದು ಸರಿಯಾದ ಕ್ರಮವಾಗುತ್ತದೆ. ಕೇವಲ ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಗುರಿಯಾಗಿ ಬೆತ್ತಲಾಗುವುದು ಬೇಡ. ಬಹುಶಃ ಇಂತಹ ಹೇಳಿಕೆಗಳ ಮೂಲಕ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿಶ್ವವಿದ್ಯಾಲಾಯಗಳಿಂದ ಮತ್ತೊಂದು ಗೌರವ ಡಾಕ್ಟರೇಟ್ ಪಧವಿಯ ನಿರೀಕ್ಷೆಯನ್ನು ಇಟ್ಟುಕೊಂಡಿರಬಹುದು. ಬೈರಪ್ಪನವರ ಈ ಹೇಳಿಕೆಗೆ ಬಿಜೆಪಿ ಆಡಳಿತದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದರೂ ಆಶ್ಚರ್ಯವಿಲ್ಲ ಎಂದು ರಮೇಶ್ ಬಾಬು ಲೇವಡಿ ಮಾಡಿದ್ದಾರೆ.

Key words: Governor, action, justified, SL Bhairappa, congress, Ramesh Babu

Tags :

.