HomeBreaking NewsLatest NewsPoliticsSportsCrimeCinema

ಲೋಕಸಭೆ ಚುನಾವಣೆ: ಪುತ್ರನ ಪರ ಬ್ಯಾಟ್ ಬೀಸಿದ ಸಚಿವ ಡಾ.ಹೆಚ್.ಸಿ ಮಹದೇವಪ್ಪ.

01:37 PM Nov 24, 2023 IST | prashanth

ಮೈಸೂರು,ನವೆಂಬರ್,24,2023(www.justkannada.in):  ಚಾಮರಾಜ ನಗರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರ ಸುನೀಲ್ ಬೋಸ್ ಪರ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಬ್ಯಾಟ್ ಬೀಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ನಾನು ಯೋಚನೆ ಮಾಡಿಲ್ಲ.  ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತೇನೆ. ನಾನು ಆಕಾಂಕ್ಷಿ ಏನಾಲ್ಲ ಚಾಮರಾಜ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸುನೀಲ್ ಬೋಸ್ ಕೂಡ ಪಕ್ಷ ತೀರ್ಮಾನ ಮಾಡಿದ್ರೆ ಸ್ಪರ್ಧೆ  ಮಾಡುತ್ತಾರೆ. ಪಕ್ಷಕ್ಕೆ ಕೆಲಸ ಮಾಡಿದವರು ಸ್ಪರ್ಧೆ ಮಾಡಬೇಕು. ಸುನೀಲ್ ಬೋಸ್ ನನ್ನ ಮಗ ಅಂತ ಹೇಳುತ್ತಿಲ್ಲ ಕೆಲಸ ಮಾಡಿದ್ದಾರೆ. ಪಕ್ಷ ಆಯ್ಕೆ ಮಾಡಿದರೇ ಸುನೀಲ್ ಬೋಸ್ ಆಕಾಂಕ್ಷಿ ಎಂದರು.

ಚಾಮರಾಜನಗರ, ಮೈಸೂರು- ಕೊಡಗು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಆಯ್ಕೆ ಆಗಿಲ್ಲ.  ನಾನು ಸುನೀಲ್ ಬೋಸ್ ಪರ ಮಾತನಾಡುತ್ತಿಲ್ಲ.  ಪಕ್ಷದ ಸದಸ್ಯತ್ವ ಪಡೆಯದವರೇ ಶಾಸಕರಾಗಿದ್ದಾರೆ. ರಾಜಕೀಯದಲ್ಲಿ ಅಂಥ ಸನ್ನಿವೇಶಗಳು ಬಂದು ಬಿಡುತ್ತವೆ. ನಂಜನಗೂಡು ಉಪಚುನಾವಣೆಯಲ್ಲೇ ಸುನೀಲ್ ಬೋಸ್ ಅಭ್ಯರ್ಥಿ ಆಗಬೇಕಿತ್ತು.  ಆಗಿನಿಂದಲೇ ಸಂಘಟನೆ ಮಾಡಿದ್ದಾನೆ.‌ ಆದರೆ ಮೂರು ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ.  ಅದಾಗ್ಯೂ ಮುನಿಸಿಕೊಳ್ಳದೆ ಪಕ್ಷದ ಪರ ಕೆಲಸ ಮಾಡಿದ್ದಾನೆ. ಅಭ್ಯರ್ಥಿ ಆಯ್ಕೆಗಾಗಿ ವೀಕ್ಷಕರು ಬಂದು ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ.  ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.

ಮಾಜಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಕಾಂಗ್ರೆಸ್ ಪಕ್ಷಕ್ಕೆ ಅವರು ಬಂದರೆ ಬೇಡ ಅಂತ ಹೇಳೋದಿಲ್ಲ.  ಸಿದ್ದಾಂತ ಒಪ್ಪಿಕೊಂಡು ಬಂದರೆ ಬರಲಿ ಬೇಡ ಅನ್ನೋದಿಲ್ಲ. ಸೋಮಣ್ಣ ಅವರ ಜೊತೆ ಯಾವುದೇ ಸಂಪರ್ಕ ಇಲ್ಲ. ಅವರು ನಮ್ಮನ್ನ ಸಂಪರ್ಕ ಮಾಡಿಲ್ಲ. ಪಕ್ಷ ತೀರ್ಮಾನ ಮಾಡಿದರೆ ಬರಲಿ. ನಿನ್ನೆ ತಾನೇ ಸೋಮಣ್ಣ ನಾವು ಭೇಟಿ ಆಗಿದ್ದವು. ಆದರೆ ಪಕ್ಷ ಸೇರ್ಪಡೆ ವಿಚಾರ ಬಗ್ಗೆ ಮಾತುಕತೆ ಆಗಿಲ್ಲ. ಯಾರು ಪಕ್ಷಕ್ಕೆ ಬರುತ್ತಾರೋ ಅವರನ್ನ ಸಿದ್ದಾಂತ ಮೆರೆಗೆ ಸೇರಿಸಿಕೊಳ್ಳುತ್ತೇವೆ ಎಂದರು.

ಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೇ ಸಲ್ಲಿಕೆ ಆಗಿಲ್ಲ: ಊಹೆ ಮಾಡಿ ವಿರೋಧ ಮಾಡಿದರೆ ಹೇಗೆ ?

ಜಾತಿಗಣತಿ ವರದಿಗೆ ವಿರೋಧ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ,  ಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೇ ಸಲ್ಲಿಕೆ ಆಗಿಲ್ಲ. ಊಹೆ ಮಾಡಿ ವಿರೋಧ ಮಾಡಿದರೆ ಹೇಗೆ ? ಎಂದು ಪ್ರಶ್ನಿಸಿದರು.

ಪ್ರತಿಯೊಬ್ಬರಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಗಬೇಕು. ಅದಕ್ಕಾಗಿಯೇ ನಮ್ಮ ಸರ್ಕಾರ ಇದ್ದಾಗ ಸಮೀಕ್ಷೆ ನಡೆಸಲಾಗಿತ್ತು. ನಮ್ಮದೇ ಸರ್ಕಾರವಿದ್ದರೆ ವರದಿ ಸ್ವೀಕಾರ ಆಗುತ್ತಿತ್ತು. ಈಗ ವರದಿ ಸ್ವೀಕಾರ  ಆಗಬೇಕಿದೆ. ಅಂತಿಮ ವರದಿ ಸಲ್ಲಿಕೆಗೆ ಸಮಯಾವಕಾಶ ಕೇಳಿದ್ದಾರೆ.  ವರದಿಯಲ್ಲಿ ಏನಿದೆ ಅಂತ ಯಾರೂ ನೋಡಿಲ್ಲ. ಸರ್ಕಾರದ ಕೈ ಸೇರುವ ಮುನ್ನವೇ ವಿರೋಧ ಮಾಡುತ್ತಿದ್ದಾರೆ.  ಅದೆಲ್ಲ ಹೊರಗಿನ ನಿರ್ಧಾರ.  ಸಂಪುಟ ತೆಗೆದುಕೊಳ್ಳುವ ತೀರ್ಮಾನ ಮಾತ್ರ ಸರ್ಕಾರದ ನಿರ್ಧಾರ ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

Key words: LokSabha Elections- Minister -Dr. HC Mahadevappa - bat - his son.

Tags :
LokSabha Elections- Minister -Dr. HC Mahadevappa - bat - his son.
Next Article