For the best experience, open
https://m.justkannada.in
on your mobile browser.

ತೆರಿಗೆ ಹಣ ತನ್ನ ಖಾತೆಗೆ ಹಾಕಿಸಿಕೊಂಡು ವಂಚನೆ: ಕಂಪ್ಯೂಟರ್‌ ಅಪರೇಟರ್‌ ವಿರುದ್ದ ದೂರು ದಾಖಲು.

06:13 PM Jun 08, 2024 IST | prashanth
ತೆರಿಗೆ ಹಣ ತನ್ನ ಖಾತೆಗೆ ಹಾಕಿಸಿಕೊಂಡು ವಂಚನೆ  ಕಂಪ್ಯೂಟರ್‌ ಅಪರೇಟರ್‌ ವಿರುದ್ದ ದೂರು ದಾಖಲು
Contextual picture

ಮೈಸೂರು,ಜೂನ್, 8,2024 (www.justkannada.in):  ಸಾರ್ವಜನಿಕರು ಸಂದಾಯಿಸಲು ಬಂದ ತೆರಿಗೆ ಹಣವನ್ನ ತನ್ನ ಸ್ವಂತ ಬ್ಯಾಂಕ್  ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ ಆರೋಪದ ಮೇಲೆ  ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ  ಕಂಪ್ಯೂಟರ್‌ ಅಪರೇಟರ್‌ ವಿರುದ್ದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಶ್ರೀರಾಂಪುರ ಪಟ್ಟಣ ಪಂಚಾಯಿತಿ  ಕಂಪ್ಯೂಟರ್‌ ಅಪರೇಟರ್‌ (ದಿನಗೂಲಿ ನೌಕರರು) ನಮ್ರತ ಎಂ. ವಿ ವಿರುದ್ದ ದೂರು ದಾಖಲಾಗಿದೆ. ಈ ಸಂಬಂಧ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ ಅವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶ್ರೀರಾಂಪುರ ಪಟ್ಟಣ ಪಂಚಾಯಿತಿಯಲ್ಲಿ ನಮ್ರತ, ಎಂ. ವಿ ಕಛೇರಿಯ ಟೈಪಿಂಗ್‌ ಕೆಲಸದ ಜೊತೆಗೆ ಸಾರ್ವಜನಿಕರ ತೆರಿಗೆ ಹಣವನ್ನು ಇ-ಸ್ಟೀಕೃತಿ (ಚಲನ್‌) ಪದ್ಧತಿಯಲ್ಲಿ ಸೃಜಿಸುವ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಇವರ ಮೇಲೆ ತೆರಿಗೆ ಹಣವನ್ನು ಅವರ ಸ್ವಂತ ಬ್ಯಾಂಕ್‌ ಖಾತೆಗೆ ಸಾರ್ವಜನಿಕರಿಂದ ಹಣವನ್ನು ಜಮೆ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು.

ಈ ಕುರಿತಾಗಿ ದಿನಾಂಕ: 13-05- 2024 ರಂದು ವಿಶ್ವನಾಥ್‌ ಖಿಣಿ ಜಯನಗರ, ಮೈಸೂರು ಇವರು ತಮ್ಮ ಸ್ವತ್ತುಗಳಿಗೆ ತೆರಿಗೆ ಸಂದಾಯಿಸಲು ಕಛೇರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಪರಿಶೀಲಿಸಲಾಗಿ 2023- 24ನೇ ಸಾಲಿನ ಕಂದಾಯ ಬಾಕಿ ಇರುವುದಾಗಿ ಸದರಿಯವರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಶ್ವನಾಥ್‌ ಖಿಣಿ  2023-34ನೇ ಸಾಲಿನಲ್ಲಿ ಅವರಿಗೆ ಸಂಬಂಧಪಟ್ಟ ಸ್ಪತ್ತುಗೆ ಸೇರಿ  47900/-ರೂ. ಗಳನ್ನು ತೆರಿಗೆ ಸಂದಾಯಿಸಲು ಕಳೆದ ವರ್ಷ ನಮ್ರತ ಎಂ. ವಿ. ಅವರಲ್ಲಿ ಚರ್ಚಿಸಿದಂತೆ ನಮ್ರತ ರವರು ಸ್ವಂತ ಬ್ಯಾಂಕ್‌ ಖಾತೆಯ ವಿವರವನ್ನು ನೀಡಿದ್ದು, ಇದಕ್ಕೆ ವಿಶ್ವನಾಥ್‌. ಖಿಣಿಯವರು 47900/-ರೂಗಳನ್ನು ಸಂದಾಯಿಸಿರುವುದು ಬೆಳಕಿಗೆ ಬಂದಿತು.

Contextual picture

ಈ ಬಗ್ಗೆ 13. 05. 2024ರಂದು ನಮ್ರತ ಎಂ. ವಿ.  ಅವರ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದರು.  ಇದಕ್ಕೆ ಸಂಬಂಧಿಸಿದಂತೆ  ನಮ್ರತ ಎಂ. ವಿ ಅವರಿಗೆ 14. 05, 2024ರಂದು ಕಾರಣ ಕೇಳಿ ನೋಟೀಸ್‌ ನೀಡಲಾಗಿತ್ತು. ಇದಕ್ಕೆ   ನಮ್ರತ ಎಂ. ವಿ.ಅವರು ಉತ್ತರ ನೀಡಿ,  ಕಛೇರಿ ಕ್ಯೂಆರ್‌ ಕೋಡ್‌ ಸರ್ವರ್‌ ಸಮಸ್ಯೆ ಕಾರಣದಿಂದಾಗಿ ಅವರ ಅಕೌಂಟ್‌ ನಂಬರನ್ನು ವಿಶ್ವನಾಥ್‌ ಖಿಣಿ ರವರಿಗೆ ನೀಡಿದ್ದಾಗಿ, ಹೀಗೆ ವಿಶ್ವನಾಥ್‌ ಖಿಣಿರವರಿಂದ ಅಕೌಂಟ್‌ ಗೆ ಬಂದ ಹಣವನ್ನು ಸಾಲವೆಂದು ಭಾವಿಸಿ ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಹಣವನ್ನು ಬಳಸಿಕೊಂಡಿರುವುದಾಗಿ ಪ್ರಸ್ತುತ  ವಿಶ್ವನಾಥ್‌ ಖಿಣಿ ಅವರು ತೆರಿಗೆ ಸಂದಾಯಿಸಲು ಬಂದ ಸಂಬಂಧಪಟ್ಟ ಸ್ವತ್ತುಗೆ ಇದೇ ಹಣದಿಂದ ಕಂದಾಯವನ್ನು ಸಂದಾಯಿಸಿರುವುದಾಗಿ ಈ ಪ್ರಕರಣದಿಂದ ನನ್ನ ವಿರುದ್ದ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಲಿಖಿತ ಹೇಳಿಕೆ ಸಲ್ಲಿಸಿದ್ದರು.

ಇದೇ ರೀತಿ ಇನ್ನಷ್ಟು ಪ್ರಕರಣಗಳು ಕಳೆದ ಆರ್ಥಿಕ ವರ್ಷದಲ್ಲಿ ಆಗಿರಬಹುದೆಂಬ ಹಿನ್ನಲೆಯಲ್ಲಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ಈಗಾಗಲೇ ವರದಿ ನೀಡಿದ್ದು, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭೀವೃದ್ಧಿ ಕೋಶ, ಮೈಸೂರು ಇಲ್ಲಿ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣದ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸಲು ಸಮಯಾವಕಾಶ, ಚುನಾವಣೆ ಕೆಲಸದ ಒತ್ತಡ ಕಾರಣದಿಂದಾಗಿ ದೂರನ್ನು ಸಲ್ಲಿಸುವುದು ವಿಳಂಬವಾಗಿದ್ದು  ನಮ್ರತ ಎಂ. ವಿ. ಕಂಪ್ಯೂಟರ್‌ ಅಪರೇಟರ್‌ (ದಿನಗೂಲಿ ನೌಕರರು) ಇವರಿಂದ ಸಾರ್ವಜನಿಕರಿಗೆ ವಂಚನೆ ಮತ್ತು ಸರ್ಕಾರಕ್ಕೆ ಬರಬೇಕಾದ ಆರ್ಥಿಕ ನಷ್ಟ ಆಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸುರೇಶ್ ಎಂ.ಕೆ ಅವರು ದೂರನಲ್ಲಿ ಉಲ್ಲೇಖಿಸಿದ್ದರು. ಇದೀಗ ವಿದ್ಯರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಮ್ರತಾ ಅವರ ವಿರುದ್ದ ದೂರು ದಾಖಲಾಗಿದೆ.

Key words: mysore, Cheating, tax money, computer operator

Tags :

.