HomeBreaking NewsLatest NewsPoliticsSportsCrimeCinema

ಈ ಬಾರಿ ಸಂಭ್ರಮ, ವಿಜೃಂಭಣೆಯಿಂದ ‘ಶ್ರೀರಂಗಪಟ್ಟಣ ದಸರಾ’ ಆಚರಣೆ: ಸಕಲ ಸಿದ್ದತೆಗೆ ಸೂಚನೆ

04:17 PM Sep 02, 2024 IST | prashanth

ಮಂಡ್ಯ, ಸೆಪ್ಟಂಬರ್,2,2024 (www.justkannada.in): ಶ್ರೀರಂಗಪಟ್ಟಣ ದಸರಾ - 2024 ರ ಕಾರ್ಯಕ್ರಮವನ್ನು ಕಳೆದ ವರ್ಷಕ್ಕಿಂತ ಈ ಬಾರಿ ಬಹಳ ಅದ್ದೂರಿಯಾಗಿ, ಸಂಪ್ರದಾಯಿಕವಾಗಿ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸೋಣ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ - 2024 ರ ಆಚರಣೆಯ ಸಂಬಂಧ ಸಭೆ ನಡೆಸಿ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿದರು.

2024 ನೇ ಸಾಲಿನ ಶ್ರೀರಂಗಪಟ್ಟಣದ ದಸರಾ ಆಚರಣೆ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಅಕ್ಟೋಬರ್ 4 ರಿಂದ 6 ರವರೆಗೆ 3 ದಿನಗಳ ಕಾಲ ಅಥವಾ ಅಕ್ಟೋಬರ್ 4 ರಿಂದ 8 ರವರೆಗೆ 5 ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸಬೇಕೇಂದಿದ್ದು, ಇದರಲ್ಲಿ ಎಷ್ಟು ದಿನ ಆಚರಣೆ ಮಾಡಬೇಕು ಎಂದು ಶೀಘ್ರವೇ ನಿರ್ಧಾರಿಸಲಾಗುವುದು ಎಂದರು.

ಈಗಾಗಲೇ ಶ್ರೀರಂಗಪಟ್ಟಣ ದಸರಾ ಆಚರಣೆ 2024 ಕ್ಕೆ ಸಂಬಂಧಿಸಿದಂತೆ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಮಿತಿ, ಆಹಾರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ವಸ್ತು ಪ್ರದರ್ಶನ ಸಮಿತಿ, ಸ್ವಚ್ಛತಾ ಮತ್ತು ನೈರ್ಮಲ್ಯ ಸಮಿತಿ, ಕ್ರೀಡಾ ಸಮಿತಿ, ಅಲಂಕಾರ ಸಮಿತಿ, ಹಣಕಾಸು ಸಮಿತಿ, ಆಹಾರ ಸಮಿತಿಗಳನ್ನು ಒಳಗೊಂಡಂತೆ ಮುಂತಾದ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಯು ತಮಗೆ ನೀಡಿರುವ ಜವಾಬ್ದಾರಿಗಳನ್ನು ವಿಳಂಬ ಮಾಡದೆ ಇಂದಿನಿಂದಲೇ ಯೋಜನೆ ಸಿದ್ದಪಡಿಸಿ ಎಂದರು.

ಸಾಂಸ್ಕೃತಿಕ ಸಮಿತಿಯು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಸಮಿತಿಯಲ್ಲಿ ಅನುಮೋದನೆಗೊಳ್ಳದಿರುವವರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದ ಕಾರಣ ನಿರ್ದೇಶನದಂತೆ ಕೆಲಸ ಮಾಡಿ. ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. .

ವೇದಿಕೆ ಸಮಿತಿಯು ಬನ್ನಿ ಮಂಟಪದಲ್ಲಿ ಆಯೋಜಿಸುವ ಜಂಬೂಸವಾರಿ ಕಾರ್ಯಕ್ರಮಕ್ಕೂ ವೇದಿಕೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸಂಬಂಧಿಸಿದಂತೆ ಮಕ್ಕಳ ಚಲನಚಿತ್ರೋತ್ಸವವನ್ನು ಏರ್ಪಡಿಸಬೇಕು.  ಮಕ್ಕಳಿಗೂ ಸಹ ಉತ್ತಮ ಸಂದೇಶ ನೀಡುವಂತಹ ಚಲನಚಿತ್ರಗಳು ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳಬೇಕು ಎಂದು ತಿಳಿಸಿದರು.

ಹಣಕಾಸು ಸಮಿತಿ ಕಾರ್ಯಕ್ರಮವು ಮುಗಿದ ಒಂದು ವಾರದೊಳಗೆ ಕಲಾವಿದರ ಸಂಭಾವನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನೀಡಬೇಕಾದ ಬಿಲ್ ಗಳ  ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸಬಾರದು. ಮೆರವಣಿಗೆ ಸಮಿತಿಯು ಮೆರವಣಿಗೆ ಹೋಗುವಂತಹ ಮಾರ್ಗದ ರೂಟ್ ಮ್ಯಾಪ್ ಅನ್ನು ಸಿದ್ದಪಡಿಸಿಕೊಳ್ಳಿ. ಮೆರವಣಿಗೆ ಹೋಗುವ ಮಾರ್ಗಗಳಲ್ಲಿ ಗುಂಡಿಗಳಿದ್ದರೆ ಅವುಗಳನ್ನು ಸರಿಪಡಿಸಿ. ವಿದ್ಯುತ್ ತಂತಿಗಳು ಹಾದುಹೋಗಿರುವಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ವಸ್ತು ಪ್ರದರ್ಶನ ಸಮಿತಿಯಲ್ಲಿ ಕಳೆದ ವರ್ಷ ಕಾರ್ಯ ನಿರ್ವಹಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೇ ಈ ವರ್ಷವೂ ನೇಮಕ ಮಾಡಲಾಗಿದೆ. ಆದ್ದರಿಂದ ಆದಷ್ಟು ಬೇಗ ನಿಮಗೆ ನೀಡಿರುವ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ ಎಂದು ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ಒಟ್ಟು 200 ಮಳಿಗೆಗಳನ್ನು ಹಾಕಲಾಗುವುದು. ಅದರಲ್ಲಿ 50 ಮಳಿಗೆಗಳು ಆಹಾರಕ್ಕೆ ಸೀಮಿತವಾಗಿದ್ದು, ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಆಯಾ ಜಿಲ್ಲೆಯ ವಿಶೇಷ ಖಾದ್ಯಗಳು, ತಿಂಡಿ ತಿನಿಸುಗಳನ್ನು ತಯಾರಿಸಬೇಕು. ಇನ್ನುಳಿದ 150 ಮಳಿಗೆಗಳನ್ನು ವಿಭಿನ್ನ ರೀತಿಯ ವಸ್ತು ಪ್ರದರ್ಶನಕ್ಕೆ ಮೀಸಲಿಡಿ. ಆಹಾರ ಮಳಿಗೆಗಳ ಬಳಿ ಕಡ್ಡಾಯವಾಗಿ ಕಸದ ಬುಟ್ಟಿಗಳನ್ನು ಇಡಿ  ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಮಿತಿಯು ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿಯು ಕಾರ್ಯಕ್ರಮದಲ್ಲಿ ಪೂರ್ಣವಾಗಿ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ನಿಮ್ಮದಾಗಿದೆ. ಆದ್ದರಿಂದ ಪ್ರತಿ ಮಳಿಗೆಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯವಾಗಿದೆ ಎಂದರು.

ನಗರ ವಿದ್ಯುತ್ ಮತ್ತು ಅಲಂಕಾರ ಸಮಿತಿಯವರು ಕಾರ್ಯಕ್ರಮದಲ್ಲಿ ಉತ್ತಮ ಮಟ್ಟದ ವಿದ್ಯುತ್ ದೀಪಾಲಂಕಾರದಿಂದ ಸಾರ್ವಜನಿಕರು ಆಕರ್ಷಣಿಯವಾಗುವಂತೆ ಕಾರ್ಯ ನಿರ್ವಹಿಸಿ. ಈ ಬಗ್ಗೆ ಸಮಿತಿಯ ಸದಸ್ಯರನ್ನೊಳಗೊಡಂತೆ ಚರ್ಚಿಸಿ ಎಂದರು.

ಕ್ರೀಡಾ ಮತ್ತು ಯೋಗ ದಸರಾ ಸಮಿತಿಯು ಯಾವ ದಿನದಂದು ಏನೇನು ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಒಂದು ವರದಿಯನ್ನು ತಯಾರಿಸಬೇಕು. ದಸರಾದಲ್ಲಿ ನಡೆಯುವ ಕವಿ ಘೋಷ್ಠಿ, ಮಕ್ಕಳ ಚಲನಚಿತ್ರೋತ್ಸವ, ಯೋಗ, ಮ್ಯಾರಥಾನ್ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಅದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಡಿಸಿ ಕುಮಾರ ತಿಳಿಸಿದರು.

ಸಭೆಯಲ್ಲಿ ಡಿ ಒ ಎಸ್ ಪಿ ಮುರಳಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Key words: Srirangapatna Dasara, celebrate, mandya, DC

Tags :
celebrateMandya DCSrirangapatna Dasara
Next Article