HomeBreaking NewsLatest NewsPoliticsSportsCrimeCinema

ಯದುವೀರ್ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ-ಮೈಸೂರಿನಲ್ಲಿ ಸುಮಲತಾ ಅಂಬರೀಶ್ ಮತಯಾಚನೆ.

02:05 PM Apr 20, 2024 IST | prashanth

ಮೈಸೂರು,ಏಪ್ರಿಲ್,20,2024 (www.justkannada.in): ಯದುವೀರ್ ಒಡೆಯರ್ ಅವರು ತುಂಬ ಸರಳ ವ್ಯಕ್ತಿ, ನಿಮ್ಮೆಲ್ಲರ ಸೇವೆ ಮಾಡಲು ಬಂದಿದ್ದಾರೆ. ಹೀಗಾಗಿ ಅವರನ್ನ ಗೆಲ್ಲಿಸಿ ಲೋಕಸಭೆಗೆ  ಕಳುಹಿಸಿಕೊಡಿ ಎಂದು  ಮಂಡ್ಯ ಸಂಸದೆ ಸುಮಲತಾ ಅಂಬರೀಶ್  ಮನವಿ ಮಾಡಿದರು.

ಮೈಸೂರು ಕೊಡುಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್  ಪರ ಸುಮಲತಾ ಅಂಬರೀಶ್  ಮತಯಾಚನೆ ಮಾಡಿದರು. ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ನಡೆದ ನಾರಿಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾಗ ನನ್ನ ನೆರೆವಿಗೆ ನಿಂತದ್ದೇ ನನ್ನ ಮಹಿಳೆಯರು. ಮೈಸೂರು ಅಂದರೆ ನಮಗೆ ಅವಿನಾಭಾವ ಸಂಬಂಧ ಇದೆ. ಅಂಬರೀಶ್ ಅವರು ಓದಿದ್ದು, ಬೆಳೆದಿದ್ದು ಇಲ್ಲಿಯೇ. ನಾವು ಇಲ್ಲಿ ಹಲವಾರು ಸಿನಿಮಾ ಚಿತ್ರೀಕರಣಕ್ಕೆ ಬರುತ್ತಿದ್ದೆವು. ಈ ಸುಂದರ, ಸಾಂಸ್ಕೃತಿಕ ನಗರ ಹೇಗೆ ಆಯ್ತು. ಇದು ಸ್ವಾತಂತ್ರ್ಯ ಪೂರ್ವದಲ್ಲೇ ಅಭಿವೃದ್ಧಿ ಹೊಂದಿದ ನಗರ ಇದಕ್ಕೆ ಯಾರು ಕಾರಣ, ಆಧುನಿಕ ನಗರ ನಿರ್ಮಾಣಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೈಸೂರಿನ ಅಭಿವೃದ್ಧಿಗೆ ಹಲವಾರು  ಯೋಜನೆ ತಂದಿದ್ದಾರೆ. ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನ ಪ್ರಪಂಚದ ನಂಬರ್ 1 ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕನಸು ಹೊಂದಿರುವ ಮೋದಿಯವರ ಕೈ ಬಲಪಡಿಸಲು ನಾವೆಲ್ಲಾ ಶ್ರಮವಹಿಸಬೇಕಾಗಿದೆ. ಮೋದಿ ಅವರು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ನಮ್ಮ ದೇಶದ ಜನರಿಗಾಗಿ ಶ್ರಮಿಸುತ್ತಿದ್ದಾರೆ, ಮಹಿಳೆಯರಿಗೆ ಹಲವಾರು ಯೋಜನೆಗಳನ್ನ ಕೊಟ್ಟಿದ್ದಾರೆ, ಉಜ್ವಲ್ ಯೋಜನೆ ಸೇರಿದಂತೆ ಹಲವಾರು ಯೋಜನೆ ಕೊಟ್ಟು ಸ್ವಾಭಿಮಾನದ ಜೀವನ ನಡೆಸಲು ನೆರವಾಗಿದ್ದಾರೆ. ನಿಮ್ಮ ಬದುಕನ್ನ ಕಟ್ಟಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಮೋದಿ ಅವರು ಕನಸ್ಸು ಕಂಡ್ರೆ ಅದನ್ನು ಕಾರ್ಯ ರೂಪಕ್ಕೆ ತರದೆ ಬಿಡಲ್ಲ, ಮೋದಿ ಅವರ ನೇತೃತ್ವದ  ಸರ್ಕಾರ ಬಂದರೆ 140 ಕೋಟಿ ಭಾರತೀಯರಿಗೆ ಅನುಕೂಲ ಆಗುತ್ತದೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಯದುವೀರ್ ಒಡೆಯರ್ ಅವರು ತುಂಬ ಸರಳ ವ್ಯಕ್ತಿ. ಅವರನ್ನ ವಿರೋಧದ ಮಾಡುವವರಿಗೆ ತಕ್ಕ ಉತ್ತರ ಕೊಡಬೇಕು. ಯದುವೀರ್ ಒಬ್ಬ ಯುವಕ, ವಿದ್ಯಾವಂತರಾಗಿದ್ದಾರೆ. ಅವರಿಗೆ ರಾಜಕೀಯಕ್ಕೆ ಬರುವ ಅನಿವಾರ್ಯತೆ ಇಲ್ಲ. ನಿಮ್ಮೆಲ್ಲರ ಸೇವೆ ಮಾಡಲು ಬಂದಿದ್ದಾರೆ. ಅವರನ್ನ ಗೆಲ್ಲಿಸಿಕೊಂಡು ಬರುವ ಮೂಲಕ ಮೈಸೂರು ಮಹಾರಾಜರ  ಋಣ ತೀರಿಸಿಕೊಳ್ಳುವ ಅವಕಾಶ ನಿಮಗೆ ಬಂದಿದೆ. ಮೈಸೂರು, ಮಂಡ್ಯ,ಚಾಮರಾಜನಗರ, ಬೆಂಗಳೂರು ಜನರಿಗೆ ಒಂದಲ್ಲ ಒಂದು ರೀತಿ ಮೈಸೂರು ಮಹಾರಾಜರ ಕೊಡುಗೆ ಅವರ ಋಣ ನಮ್ಮ ಮೇಲಿದೆ. ಕೆಆರ್ ಎಸ್  ಆಣೆಕಟ್ಟುಯಿಂದ ಸಹಸ್ರಾರು ಜನರಿಗೆ ಅನುಕೂಲ ಆಗಿದೆ. ಅವರನ್ನ ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಡಿ ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದರು.

Key words: Sumalata Ambarish, Mysore, Yaduveer

Tags :
Loksabha-election- Sumalata Ambarish- Mysore- Yaduveer
Next Article